ಸುವರ್ಣ ಗೋಡೆಗೆ ಚಿನ್ನದ ಚಿತ್ತಾರ
ಲೇಖಕರು : ರಾಘವೇಂದ್ರ ಅಡಿಗ ತೀರ್ಥಹಳ್ಳಿ
ಗುರುವಾರ, ಜೂನ್ 18 , 2015
|
ಜೂನ್ 17, 2015
|
ಸುವರ್ಣ ಗೋಡೆಗೆ ಚಿನ್ನದ ಚಿತ್ತಾರ
ಬೆ೦ಗಳೂರು :
ಶ್ರೀ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಮಣೂರು ವಾಸುದೇವ ಮಯ್ಯರ ಸಾರಥ್ಯದ 'ಮಯ್ಯ ಯಕ್ಷ ಕಲ್ಯಾಣ ನಿಧಿ', ಯಕ್ಷಗಾನ ಕಲಾವಿದರ ಸಹಾಯಕ್ಕಾಗಿ ಸ್ಥಾಪಿಸಿದ್ದು, ಈಗಾಗಲೇ ಹಲವಾರು ಕಲಾವಿದರು ಇದರ ಫಲಾನುಭವಿಗಳಾಗಿದ್ದಾರೆ. ಇದರ ವತಿಯಿಂದ ಹಲವಾರು ಯಕ್ಷಗಾನ ಪ್ರದರ್ಶನಗಳು ನಡೆದಿದ್ದು, ಯಕ್ಷಾಭಿಮಾನಿಗಳ ಸಹಕಾರದಿಂದ ಯಶಸ್ಸನ್ನು ಕಂಡಿವೆ.
ಈಗ ಬೆಂಗಳೂರಿನ ಈ ಮಳೆಗಾಲದ ಮೊದಲ ದಕ್ಷಿಣೋತ್ತರ ಸುಪ್ರಸಿದ್ಧ ಕಲಾವಿದರ ಸಂಗಮದ ಅಮೋಘ ಹಗಲು ಯಕ್ಷಗಾನವನ್ನು ಶ್ರೀ ಗೋಡೆ ನಾರಾಯಣ ಹೆಗಡೆಯವರ ಯಕ್ಷಕಲಾ ಸೇವೆಯ ಐವತ್ತು ವರುಷದ ಸುವರ್ಣಸಂಭ್ರಮದ ಈ ಸುಸಂದರ್ಭದಲ್ಲಿ ದಿನಾಂಕ - 14.06.2015ರ ಭಾನುವಾರ ಬೆಳಿಗ್ಗೆ 10.30ರಿಂದ ರಾತ್ರಿ 10ರವರೆಗೆ ಸುಸಜ್ಜಿತವಾಗಿ ನವೀಕರಣಗೊಂಡಿರುವ ಪುರಭವನ (ಟೌನ್ ಹಾಲ್), ಜಯಚಾಮರಾಜೇಂದ್ರ ರಸ್ತೆ, ಬೆಂಗಳೂರು ಇಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಯಕ್ಷಗಾನದ ಧ್ವನಿವರ್ಧಕ ವಿಭಾಗದಲ್ಲಿ ದಶಕಗಳ ಕಾಲ ಅನುಭವ ಹೊಂದಿರುವ ಶ್ರೀ ನಿನಾದ ರಾಮಣ್ಣ ಕುಮಟಾ ಇವರಿಂದ ವಿಶೇಷ ಧ್ವನಿವರ್ಧಕ ವ್ಯವಸ್ಥೆ ಇದ್ದಿದ್ದು ಇನ್ನೊಂದು ವಿಶೇಷ.
'ಚಕ್ರ ಚಂಡಿಕೆ, ಗದಾಯುದ್ಧ, ಭಸ್ಮಾಸುರ ಮತ್ತು ಕೀಚಕ' ಪ್ರಸಂಗಗಳಲ್ಲಿ ಪ್ರಸಿದ್ಧ ಕಲಾವಿದರು ರಂಗಸ್ಥಳವನ್ನು ರಂಗುಗೊಳಿಸಿದರು. ಇದೇ ದಿನ ನಡೆದ ಈ ಪ್ರದರ್ಶನದಲ್ಲಿ ಪ್ರೇಕ್ಷಕರು ಯಕ್ಷ ಗಾನ-ನಾಟ್ಯದ ಸವಿಯನ್ನು ಸವಿದರು. ಮೂರು ತಲೆಮಾರುಗಳ ಕಲಾವಿದರು ಒಂದೇ ವೇದಿಕೆಯಲ್ಲಿ ಸಂಗಮಿಸಿದ್ದು ಅತೀ ಅಪರೂಪವಾಗಿತ್ತು.
ತಮ್ಮ ಎಪ್ಪತ್ತಾರನೇ ವಯಸ್ಸಿನಲ್ಲಿಯೂ ಇಪ್ಪತ್ತಾರರ ನವಯುವಕನಂತೆ ಗದಾಯುದ್ಧದ ಕೌರವನಾಗಿ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ಗೋಡೆ ನಾರಾಯಣ ಹೆಗಡೆ ಬಣ್ಣ ಹಚ್ಚಿದ್ದರು. ಲೇಖಕ ಶ್ರೀ ಭಾಸ್ಕರ ರಾವ್ ರವರು ಬರೆದ 'ಗೋಡೆ ಚಿತ್ತಾರ' (ದ್ವಿತೀಯ ಮುದ್ರಣ) ಪುಸ್ತಕವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಗೋಡೆ ನಾರಾಯಣ ಹೆಗಡೆ ದಂಪತಿಯನ್ನು ಬೆಳ್ಳಿ ಗದೆ ನೀಡುವ ಮೂಲಕ ಸನ್ಮಾನಿಸಲಾಯಿತು. ಭೀಮನಕಟ್ಟೆ ಶ್ರೀ ರಾಘವೇಂದ್ರ ಮಠದ ಶ್ರೀ ರಘುಮಾನ್ಯತೀರ್ಥ ಶ್ರೀಪಾದಂಗಳವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀ ಮಣೂರು ವಾಸುದೇವ ಮಯ್ಯ ಮತ್ತು 'ಗೋಡೆ ಚಿತ್ತಾರ' ಪುಸ್ತಕದ ಲೇಖಕ ಶ್ರೀ ಭಾಸ್ಕರ ರಾವ್ ರವರು ಅಭಿನಂದನಾ ಭಾಷಣವನ್ನು ಮಾಡಿದರು, ಶ್ರೀ ಗೋಡೆಯವರು ತಮ್ಮ ಅರವತ್ತ ಮೂರು ವರ್ಷಗಳ ಯಕ್ಷಕಲಾ ಬದುಕಿನ ನೆನಪನ್ನು ಬಿಚ್ಚಿಟ್ಟರು. ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಶ್ರೀ ಕಿಶನ್ ಹೆಗ್ಡೆ, ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ ನ ಸದಸ್ಯ ಶ್ರೀ ಅನಂತಾಚಾರ್ಯ, ಶ್ರೀ ಟಿ ಎನ್ ಸತ್ಯನಾರಾಯಣ, ಶ್ರೀಮತಿ ಪುಷ್ಪಾ ವಿ ಮಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಂದಿನಂತೆ ರಮೇಶ್ ಬೇಗಾರ್ ಶೃಂಗೇರಿಯವರ ಚಿಕ್ಕ ಚೊಕ್ಕ ನಿರೂಪಣೆ ಕಾರ್ಯಕ್ರಮದಲ್ಲಿ ಇತ್ತು.
ಶ್ರೀ ಜಗನ್ನಾಥ ಹೆಗಡೆ, ಶ್ರೀ ಸುರೇಶ ಹೆಗಡೆ ಕಡತೋಕ, ಶ್ರೀ ಮನೋಜ್ ಭಟ್, ಶ್ರೀ ಎ ಪಿ ಕಾರಂತ್, ಶ್ರೀ ರಮೇಶ್ ಬೇಗಾರ್ ಶೃಂಗೇರಿ, ಶ್ರೀ ಶ್ರೀಪಾದ ಹೆಗಡೆ, ಶ್ರೀ ಅಂಪಾರು ರತ್ನಾಕರ ಶೆಟ್ಟಿ ಕಾರ್ಯಕ್ರಮಕ್ಕೆ ಸಹಕರಿಸಿದರು.
(ಚಿತ್ರ ಕೃಪೆ - ಶ್ರೀ ಹರ್ಷ ಹೇರಳೆ)
ಕೃಪೆ :
http://facebook.com
|
|
|